Thursday, November 27, 2008

ನಮ್ಮವರು ನಮಗಿಲ್ಲ

ಮುಂಬಯಿಯಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಮುಂಬೈ ಮತ್ತೊಮ್ಮೆ ಜಾತಿಯ ಜ್ವಾಲೆಯಲ್ಲಿ ಬೆಂದು ಹೋಗಿದೆ. ನೂರಾರು ಅಮಾಯಕರ ಮಾರಣಹೋಮ ನಡೆದಿದೆ. ಹಿಂಸೆಯ ರುದ್ರ ನರ್ತನಕ್ಕೆ ತಾಯಿ ಭಾರತಿ ಬೆಚ್ಚಿ ಬಿದ್ದಿದ್ದಾಳೆ. ಎಲ್ಲಲ್ಲೂ ಈಗ ಸ್ಮಶಾನ ಮೌನ. ಎಷ್ಟು ದಿನ ಇದು ಹೀಗೆ ನಡೆಯುತ್ತಿರುತ್ತೆ? ಅನ್ಯಾಯಕ್ಕೆ ಕೊನೆಯೇ ಇಲ್ಲವೇ? ಯಾರ ಮೇಲೆ ಈ ಯುದ್ಧ? ಅಮಾಯಕರ ನಿತ್ಯ ಮಾರಣಹೋಮ ನಿಲ್ಲುವುದಾದರು ಎಂದು? ನಮ್ಮವರಿಗೇ ಯಾಕೆ ಇಂತಹ ಸಾವು? ಅಟ್ಟಹಾಸದಿ ಮೆರೆವ ಉಗ್ರರು ಬದುಕಿರಲು ಏನು ಅರಿಯದ ಅಮಾಯಕರು ಮಾತ್ರ ಯಾಕೇ ಸಾಯಬೇಕು? ಇದೇ ನ್ಯಾಯವೆಂದರೆ ಇನ್ನೂ ಅನ್ಯಾಯ ಯಾವುದು?

ಒಂದೊಮ್ಮೆ ನಮ್ಮವರೇ ಆಗಿದ್ದವರು ಇಂದು ನಮ್ಮನ್ನೇ ಕೊಲ್ಲುತ್ತಿದ್ದಾರೆ. ಯಾಕೇ ಹೀಗೆ? ನಮ್ಮ ನಡುವಿನ ಪ್ರೀತಿ ಬತ್ತಿ ಹೋಯಿತೆ? ಹಿಂಸೆ ಅಷ್ಟೊಂದು ಪ್ರಿಯವಾಯಿತೇ? ಇನ್ನೊಬ್ಬರ ರಕ್ತ ಹೀರಿ ಆನಂದಿಸುವ ಮೃಗಿಯ ವರ್ತನೆಗೆ ಕೊನೆಯೇ ಇಲ್ಲವೇ?

ಜಿ.ಎಸ್.ಶಿವರುದ್ರಪ್ಪನವರ ಈ ಗೀತೆ ಎಷ್ಟೊಂದು ಸತ್ಯ ಎನ್ನಿಸುತ್ತೆ ಇಂದಿನ ಸಮಾಜದಲ್ಲಿ

ನಮ್ಮವರು ನಮಗಿಲ್ಲ ನಮಗೆ
ನಾವೆ ಎಲ್ಲ ಕಟ್ಟ ಕಡೆಗೆ
ನಂಬಿದವರೇ ನಮಗೆ ಕಾರುವರು
ವಿಷದ ಹೊಗೆ ಆಂತರ್ಯದೊಳಗೆ

ಹೂವೆಂದು ಅಪ್ಪಿದೆನು ಹಾವಾಗಿ
ಬುಸುಗುಟ್ಟಿ ಹೆಡೆಯೆತಿತ್ತು
ಒಲವೆಂದು ನಂಬಿದೆನು ಹಗೆತನದ
ಹೊಗೆ ಎದ್ದು ಪ್ರಜ್ವಲಿಸಿತು

ಹೊಳೆಯಲ್ಲಿ ಮುಳು ಮುಳುಗಿ ಸಾಯುತಿರೆ
ದಡದಲಿ ನಿಂತು ನಕ್ಕವರು
ಈಜಿ ದಡ ಕೈ ತರಲು ನಮ್ಮವನು
ನೀನೆಂದು ಬೆನ್ನ ತಟ್ಟುವರು

ಇದು ಲೋಕ ಇದು ಬಾಳು
ಇಂತಿರುವುದು ಒಂದು ದೈವದಾಟ

ಉಗ್ರರು ತಾಜ್ ಹೋಟೆಲಿನ ಸೆಕ್ಯೂರಿಟಿಯನ್ನ ಬೆದಿಸಿ ಇಷ್ಟು ಸುಲಭವಾಗಿ ಇಂತಹ ಹೇಯ ಕೃತ್ಯ ಮಾಡಿರಲು ನಮ್ಮವರ ಸಹಕಾರನು ಇದ್ದಿರಬಹುದಲ್ಲವೇ? ಹೋಟೆಲಿನ ನೀಲಿ ನಕ್ಷೆಯನ್ನ ಅಲ್ಲಿನ ಸೆಕ್ಯೂರಿಟಿಯಲ್ಲಿನ loop holes'ಗಳನ್ನ ನಮ್ಮವರೇ ಬಾಯಿ ಬಿಟ್ಟಿರಬಹುದಲ್ಲವೇ? ನಮ್ಮವರು ನಮ್ಮ ವಿರುದ್ದವೇ ಹೀಗೆ ಕತ್ತಿ ಮಸೆದರೆ ಹೇಗೆ? ಯಾರನ್ನು ನಂಬುವುದು? ಏನೇ ಆಗಲಿ ನಮ್ಮಲ್ಲಿ ಒಗ್ಗಟ್ಟು ಇರುವವೆರೆಗೂ ಯಾರಿಂದಲೂ ಏನನ್ನು ಮಾಡಲು ಸಾಧ್ಯವಿಲ್ಲ. ದೇಶಕ್ಕಾಗಿ ನಾವು ಭಾರತೀಯರು ಪ್ರಾಣ ಬಿಡಲು ಸದಾ ಸಿದ್ದ. ನೆನ್ನೆಯ ಮುಂಬೈ ಮಾರಣಹೋಮದಲ್ಲಿ ವೀರಮರಣವನ್ನಪ್ಪಿದ ಮೂವರು ದಕ್ಷ ಪೋಲಿಸ್ ಅಧಿಕಾರಿಗಳಿಗೆ ನೂರು ನಮನ.

ಅಂದ ಹಾಗೆ ಮುಂಬೈಯಿಂದ ಬಿಹಾರಿಗರನ್ನು ಹೊಡೆದಟ್ಟಿಸುವ ಬದಲು ಅಲ್ಲಿನ ಉಗ್ರರನ್ನು ಹೊಡೆದಟ್ಟಿಸುವ ಬಗ್ಗೆ ಚಿಂತನೆ ನಡೆಯಲಿ. ಜಾತಿ ರಾಜಕಾರಣಕ್ಕೆ ಇನ್ನಾದರೂ ತೆರೆ ಬೀಳಲಿ.ನೆನ್ನೇಯ ಮಾರಣಹೋಮದಲ್ಲಿ ವೀರ ಮರಣಹೊಂದಿದ ಪ್ರತಿಯೊಬ್ಬರ ಆತ್ಮಕ್ಕೂ ಆ ಭಗವಂತನು ಶಾಂತಿಯನ್ನು ನೀಡಲಿ. ಮುಂಬೈ ಮತ್ತೆ ತಣ್ಣಗಾಗಲಿ. ಅಲ್ಲಿ ಶಾಂತಿಯ ಹೂನಗೆ ಅರಳಲಿ.