Saturday, December 29, 2012

ಬಲಿಪಶು


ಲೋಕದ ಕಣ್ಣಿಗೆ
ನಾನೊಂದು ಬಲಿಪಶು
ಪಶುವಂತೆ ನನ್ನ
ಎಳೆದೆಳೆದು ತಿಂದು
ಹಸಿವ ನೀಗಿಸಿಕೊಂಡವರಾರೊ?
ಆದರೆ ಪಶುವೆಂಬ ಬಿರುದು
ಅಂಟಿಕೊಂಡಿದ್ದು ಮಾತ್ರ ನನಗೆ
ನಾನೊಂದು ಬಲಿಪಶು!

ಹೆತ್ತವರೆ ಬೇಡವೆಂದು
ಕಾಡಿಗೆ ಅಟ್ಟಿರಲು
ಅವನ ಕಷ್ಟಗಳಲಿ
ಜೊತೆಗಿದ್ದ ನನಗೆ
ಸಿಕ್ಕಿದ್ದಾದರೂ ಏನು?
ಅವನ ಅನುಮಾನ ಮತ್ತು
ಅವಮಾನಗಳ ಬಿಟ್ಟು
ಲೋಕದ ಕಣ್ಣಿಗೆ ರಾಮ
ದೇವನೆನಿಸಿದರು
ಆ ಕ್ಷಣದಲ್ಲಿ ನನಗೆ
ಅವನೊಬ್ಬ ಸಾಮಾನ್ಯ
ಮನುಷ್ಯನಂತೆ ಕಂಡಿದ್ದ
ಹೆಣ್ಣು ಸಹನಾಮಯಿಯಂತೆ,
ಕರುಣಾಮಯಿಯಂತೆ,
ಕ್ಷಮಯಾಧರಿತ್ರಿಯಂತೆ
ಸಹಿಸಿಕೊಳ್ಳುತ್ತಿರಬೇಕು ಎಲ್ಲವ!

ಜೂಜಿಗೆ ದಾಸರಾಗಿ ಆಡಿದ್ದು
ಅನುಭವಿಸಿದ್ದು ಆ ಐವರು
ಅಣ್ಣತಮ್ಮಂದಿರಾದರು
ನಿಜ ಅರ್ಥದಲ್ಲಿ ಸೋತಿದ್ದು ನಾನು
ಹಂಚಿಕೊಳ್ಳಲೇನು ವಸ್ತುವೇ ನಾನು?
ಗೊತ್ತಿಲ್ಲ ಅವರಿಗೆ
ಹಂಚಿಕೊಂಡಿದ್ದು ಅವರು
ಕೇವಲ ನನ್ನ ದೇಹವ
ಹೃದಯದಲ್ಲಿ ನಾನಾರಿಗು
ಕೊಟ್ಟಿರಲಿಲ್ಲ ಒಂದಿಂಚು ಜಾಗವ
ಹೆಣ್ಣು ಸಹನಾಮಯಿಯಂತೆ,
ಕರುಣಾಮಯಿಯಂತೆ,
ಕ್ಷಮಯಾಧರಿತ್ರಿಯಂತೆ
ಸಹಿಸಿಕೊಳ್ಳುತ್ತಿರಬೇಕು ಎಲ್ಲವ!

ನನ್ನ ಭಾವನೆಗಳ ಬಲಿಪಡೆಯಲು  
ಸಮಾಜ ಕೊಟ್ಟ ಬಿರುದುಗಳು
ಸಹನಾಮಯಿ, ಕರುಣಾಮಯಿ,
ಕ್ಷಮಯಾಧರಿತ್ರಿ ಮತ್ತಿನ್ನೇನೊ?
ಸಹಿಸಲಾರೆ, ಕರುಣಿಸಲಾರೆ,
ಕ್ಷಮಿಸಲಾರೆ ನಾನೂ
ಭಾವನೆಗಳಿವೆ ಎಲ್ಲರಂತೆ ನನಲ್ಲೂ
ಆದರೆ ಕೇಳುವ ಕಿವಿಗಳಿಲ್ಲಷ್ಟೆ!

ನನ್ನ ಭಾವನೆಗಳ ಕೊಂದು
ಚಟ್ಟದಿ ಹೊತ್ತುಕೊಂಡು
ಹೋಗಿದ್ದರು ಅವರು ಅಂದೆ
ದೇಹ ಮಾತ್ರ ಉಳಿದಿತ್ತು!  
ಸತ್ತಿದ್ದೆ ನಾನು ಅಂದೆ
ಇಂದು ಸತ್ತಿದ್ದು
ಕೇವಲ ನನ್ನ ದೇಹ!

Thursday, December 20, 2012

ಅವನಾಟ

ಅವನಾಟವಂತೆ ಕೇಳಲಿಲ್ಲ
ಯಾರು ನನ್ನ ಇಷ್ಟವ
ಹುಟ್ಟಿಸು ಎಂದು ಕೇಳಿರಲಿಲ್ಲ
ಆದರು ಅವ ಹುಟ್ಟಿಸಿದ

ಹುಟ್ಟಿನೊಂದಿಗೆ ಬಿಟ್ಟಿರುವ
ಬೆನ್ನ ಹಿಂದೊಂದು
ಸಾವೆಂಬೋ ರಣಹದ್ದ
ಸುಖವೋ ದುಃಖವೋ
ಓಡುತ್ತಿರಬೇಕು
ನಿಯಮದಂತೆ ಅವನ
ಅಟ್ಟಿಸಿಕೊಂಡು ಬರುತಿದೆ
ಹಸಿದ ಹಕ್ಕಿ
ಸಿಕ್ಕವರ ಕುಕ್ಕಿ ಕುಕ್ಕಿ

ಅಸಹ್ಯ ಹುಟ್ಟಿತೆ ಆತ್ಮಕ್ಕೆ
ದೇಹದ ಮೇಲೆ?
ಕುಂದಿತೆ ಶಕ್ತಿ ದೇಹಕ್ಕೆ
ಆತ್ಮವನ್ನು ಹಿಡಿದಿಡಲು?
ನಿನ್ನೆ ಜೊತೆಗಿದ್ದವರು ಇಂದಿಲ್ಲ
ಹಾರಿತು ಆತ್ಮ ಎಲ್ಲಿಗೋ?
ಮಣ್ಣಾಗಿದೆ ದೇಹ ಮಾತ್ರ ಇಲ್ಲಿಯೆ

ಆಹಾರವಾಗಲೇ ಬೇಕಿದೆ
ಹದ್ದಿಗೆ ಎಂದಾದರು
ಅಂದಾಗುವುದು ಇಂದೆಯಾಗಲಿ
ಏನು ವ್ಯತ್ಯಾಸ?
ಗೊತ್ತಾಗಿದ್ದು ಹತ್ತಿರ ಹೋದಾಗಲೆ
ಹದ್ದಲ್ಲ ಅದೊಂದು ಸುಂದರ ಪಾರಿವಾಳ
ಹೊತ್ತು ತಂದಿದೆ ಅವನದ್ದೇ ಸಂದೇಶ
ಆಟ ಮುಗಿಯಿತು ನೀನಿನ್ನು ಸ್ವತಂತ್ರ!